ನಮ್ಮ ಶಾಲೆಯಲ್ಲಿ ನವ್ಹಂಬರ್ 1, 2019ರ ಶುಕ್ರವಾರದಂದು 64 ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಎನ್. ಬಸವರಾಜರವರು (ನಿವೃತ್ತ ಉಪನ್ಯಾಸಕರು) ಮತ್ತು ವ್ಯಾಗ್ ಇಂಡಿಯಾ ಟ್ರಸ್ಟ್ ಅಧ್ಯಕ್ಷರಾದ ಶ್ರೀಯುತ ಚನ್ನಪ್ಪ ಹಾಗೂ ಶಾಲೆಯ ಮುಖ್ಯಸ್ಥರಾದ ಶ್ರೀ ಕೆ. ಅನಿಲ್ ಬಾಬುರವರು ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದರು. ಮುಖ್ಯ ಅತಿಥಿಗಳು ದಾಸರ, ಶರಣರ, ಕವಿಗಳ ಬೀಡು ನಮ್ಮ ನಾಡು ಎಂಬ ದ. ರಾ. ಬೇಂದ್ರೆಯವರ ಕವಿವಾಣಿಯೊಂದಿಗೆ ಕರ್ನಾಟಕದ ಇತಿಹಾಸ, ಕನ್ನಡಿಗರ ಉದಾರಗುಣ, ಹಿರಿಮೆ, ಗರಿಮೆಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಕವನ ವಾಚನ ಮತ್ತು ಭಾಷಣ ಪ್ರಸ್ತುತ ಪಡಿಸಿದರು. ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಹಿರಿಮೆಯನ್ನು ಸಾರುವಂತಹ ಹಾಡು ಮತ್ತು ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ವೈಭವಯುತವಾಗಿ ಆಚರಿಸಲಾಯಿತು. ಈ ಸಮಾರಂಭದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪಾಲಕ/ಪೋಷಕರು ಉಪಸ್ಥಿತರಿದ್ದರು.